ಅಮೇಥಿ : ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆಯೊಂದು ವಿಲಕ್ಷಣ ತಿರುವು ಪಡೆದಿದ್ದು, ವಧುವಿನ ಕುಟುಂಬದ ಸದಸ್ಯರು ವರನನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವಧುವಿನ ಕುಟುಂಬವು ಮದುವೆ ಸಿದ್ಧತೆಗೆ ಆದ ಖರ್ಚನ್ನು ವಾಪಸ್ ಕೊಡಬೇಕು ಎಂದು ಪಟ್ಟು ಹಿಡಿದು ವರನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.
ಒತ್ತೆಯಾಳು ಪರಿಸ್ಥಿತಿಯು ಮದುವೆಯ ಮುಂಚಿನ ದಿನ ನಾಟಕೀಯ ಬೆಳವಣಿಗೆಗಳನ್ನು ಕಂಡಿತು. ಅಯೋಧ್ಯೆಯ ವರ ಸೋಹನಲಾಲ ಯಾದವ್ ತನ್ನ ಮದುವೆಗೆ ಕೆಲವು ದಿನಗಳ ಮೊದಲು ನಾಪತ್ತೆಯಾಗಿದ್ದ. ಆತನನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ, ಅವರ ಕುಟುಂಬವು ಆತ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದೆ. ಈ ವಿಚಾರ ತಿಳಿಯದ ವಧುವಿನ ಮನೆಯವರು ಮದುವೆ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸಿದ್ದರು. ಮದುವೆಯ ರಾತ್ರಿ, ಅತಿಥಿಗಳು ಬರಲು ಪ್ರಾರಂಭಿಸಿದರು, ಆದರೆ ವರ ಮಾತ್ರ ನಾಪತ್ತೆಯಾಗಿದ್ದ.
ಬಳಿಕ ವಧುವಿನ ಮನೆಯವರನ್ನು ಸ್ಥಳೀಯ ಪೊಲೀಸರು ಠಾಣೆಗೆ ಕರೆಸಿದ ನಂತರವೇ ಅವರಿಗೆ ಪರಿಸ್ಥಿತಿ ಬಗ್ಗೆ ತಿಳಿಯಿತು. ಪೊಲೀಸರು ನಂತರ ವರನನ್ನು ಹುಡುಕಿದ್ದಾರೆ. ಅವರ ಮಧ್ಯಪ್ರವೇಶದ ನಂತರ, ವರನು ಅಂತಿಮವಾಗಿ ಮದುವೆಗೆ ಹೋಗಲು ಒಪ್ಪಿದ್ದಾನೆ. ಮದುವೆಯ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ತಲುಪಿದ್ದಾನೆ. ಅಷ್ಟೊತ್ತಿಗಾಗಲೇ ವಧುವಿನ ಮನೆಯವರು ಆತನಿಗೆ ಬುದ್ಧಿವಾದ ಹೇಳಿ ಊಟೋಪಚಾರ ಮಾಡಿದರು. ಆದರೆ ಮದುವೆ ರದ್ದಾಗಿದೆ ಎಂದು ಹೇಳಿದರು. ಅಲ್ಲದೆ ವರನ ಮನೆಯವರಿಗೆ ವಧುವಿನ ಕುಟುಂಬಕ್ಕಾದ ಮದುವೆಯ ಸಿದ್ಧತೆಯ ಖರ್ಚನ್ನು ನೀಡಿದ ನಂತರವೇ ಆತ ಇಲ್ಲಿಂದ ಹೋಗಬಹುದು ಎಂದು ತಿಳಿಸಲಾಯಿತು. ಸೋಹನಲಾಲನನ್ನು ವಧುವಿನ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಯಿತು.
ಅಲಂಕೃತ ಕಾರಿನಲ್ಲಿ ಕುಳಿತ ಸೋಹನಲಾಲ, “ಯಾವುದೇ ತೊಂದರೆ ಇಲ್ಲ, ನಾವು ತಡವಾಗಿ ಬಂದಿದ್ದೇವೆ, ಅವರು ಈಗ ಮದುವೆ ಬೇಡ ಎಂದು ಹೇಳುತ್ತಿದ್ದಾರೆ ಮತ್ತು ಅವರಿಗಾದ ಖರ್ಚನ್ನು ಕೇಳುತ್ತಿದ್ದಾರೆ, ಅವರು ನನ್ನನ್ನು ಹೋಗಲು ಬಿಡುತ್ತಿಲ್ಲ” ಎಂದು ಹೇಳಿದ್ದಾನೆ.
ಅಲ್ಲದೆ, ಆತ ಕಾಣೆಯಾಗಿರಲಿಲ್ಲ ಎಂದು ಹೇಳಿದ್ದಾನೆ. “ನಾನು ಕಣ್ಮರೆಯಾಗಲಿಲ್ಲ. ನಾನು ಲಕ್ನೋದಲ್ಲಿದ್ದೆ. ನನ್ನ ಫೋನ್ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ನಾನು ಹೇಗೋ ಪ್ರಯತ್ನಪಟ್ಟು ಅದನ್ನು ಮತ್ತೆ ಆನ್ ಮಾಡಿದಾಗ, ಪೊಲೀಸರು ನನ್ನನ್ನು ಕರೆದರು ಮತ್ತು ನಾನು ಪೊಲೀಸ್ ಠಾಣೆಯನ್ನು ತಲುಪಿದೆ. ನಾನು ಮದುವೆಯಾಗಲು ಬಯಸಿದ್ದೆ, ಆದರೆ ವಧುವಿನ ಕಡೆಯವರು ಒಪ್ಪುತ್ತಿಲ್ಲ ಎಂದು ಹೇಳಿದ್ದಾನೆ.
ವಧುವಿನ ತಂದೆ ಲಾಲ ಬಹದ್ದೂರ್ ಯಾದವ್ ಅವರು, 10 ತಿಂಗಳ ಹಿಂದೆ ಮದುವೆಯನ್ನು ನಿಶ್ಚಯಿಸಲಾಗಿತ್ತು. “ತಿಲಕ ಸಮಾರಂಭದ ಮೂರು ದಿನಗಳ ನಂತರ ಆತ (ವರ) ಮದುವೆಗೆ ಬೇಡ ಎಂದು ಹೇಳಿದರು. ನಾವು ಯಾಕೆ ಎಂದು ಕೇಳಿದಾಗ ಆತ ಕಾರು ಬೇಕು ಎಂದು ಹೇಳಿದ. ಅದಕ್ಕೂ ನಾವು ಒಪ್ಪಿದ್ದೇವೆ. ನಂತರ ಅವರು ತನಗೆ ಕಾರು ಬೇಡ, ಬದಲಿಗೆ ನಗದು ಎಂದು ಹೇಳಿದ. ಅದಕ್ಕೂ ಒಪ್ಪಿದೆವು ಎಂದರು.
ನಂತರ ಏನಾದರೂ ಸಮಸ್ಯೆ ಇದೆಯೇ ಎಂದು ನಾವು ಮತ್ತೆ ಕೇಳಿದೆವು, ತದನಂತರ ನಾವು ಮದುವೆ ಸಿದ್ಧತೆ ಪ್ರಾರಂಭಿಸಿದೆವು. ಮದುವೆಯ ರಾತ್ರಿ, ಅತಿಥಿಗಳು ಹೊರಡಲು ಪ್ರಾರಂಭಿಸಿದರು. ಆದರೆ ವರ ಇನ್ನೂ ಬಂದಿರಲಿಲ್ಲ ಎಂದು ವಧುವಿನ ತಂದೆ ಹೇಳಿದರು. “ನಾವು ಆತನಿಗೆ ಕರೆ ಮಾಡುತ್ತಲೇ ಇದ್ದೇವೆ. ನನ್ನ ಸೋದರ ಮಾವ ಅವರ ಏರಿಯಾದವರು. ಅವರು ನನ್ನನ್ನು ಪೊಲೀಸ್ ಠಾಣೆಗೆ ಬರಲು ಹೇಳಿದರು. ನಾವು ಅಲ್ಲಿಗೆ ತಲುಪಿದಾಗ ನಮಗೆ ವರ ಸಿಕ್ಕ” ಎಂದು ಹೇಳಿದರು.
ವರದಕ್ಷಿಣೆ ಕೇಸ್ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾನೆ. ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಗೆ ನೀಡಿದ್ದು, ಇಲ್ಲಿಗೆ ಬಂದಾಗ ಊರವರಿಗೆ ಥಳಿಸಬೇಕೆನಿಸಿತು, ಅವರನ್ನು ತಡೆದು ಊಟ ಹಾಕಿದೆವು, ಮದುವೆಗೆ ಮೂರು ದಿನ ಮೊದಲು ಓಡಿ ಹೋಗಿದ್ದಾನೆ, ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ನಮಗೆ ಮೊದಲೇ ಹೇಳಿದ್ದರೆ ಆಗ ನಾವು ಮದುವೆ ಸಿದ್ಧತೆಗಳನ್ನು ಮಾಡುತ್ತಿರಲಿಲ್ಲ ಮತ್ತು ಆತ ನಮಗೆ ಮದುವೆಯ ಮೊದಲು ದ್ರೋಹ ಮಾಡಿದ್ದಾನೆ, ಮುಂದೆ ನಾವು ಅವನಿಂದ ಏನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ