ಭಾರತದ ಕೆಲಹಾವುಗಳು ಸತ್ತ ಕೆಲಗಂಟೆಗಳ ನಂತರವೂ ಕಚ್ಚುತ್ತವೆ…ವಿಷ ಕಕ್ಕುತ್ತವೆ ಎಚ್ಚರ…!

ಭಾರತದಲ್ಲಿನ ಮಾರಕ ಹಾವು ಪ್ರಭೇದಗಳಾದ ಉಗುಳುವ (ಏಕವರ್ಣದ) ನಾಗರಹಾವುಗಳು ಮತ್ತು ಕ್ರೈಟ್‌ (ಕಟು ಹಾವು)ಗಳು ಸತ್ತ ನಂತರವೂ ಅವು ನಮಗೆ ಕಚ್ಚಿ ವಿಷವನ್ನು ದೇಹದೊಳಗೆ ಕಕ್ಕಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಇಲ್ಲಿಯವರೆಗೆ, ಸತ್ತ ಕೆಲಗಂಟೆಗಳ ನಂತರವೂ ವಿಷವನ್ನು ಚುಚ್ಚುವ ಸಾಮರ್ಥ್ಯವು ಅಮೇರಿಕನ್ ರಾಟಲ್‌ಸ್ನೇಕ್‌ಗಳು, ತಾಮ್ರಮುಖಿಗಳು, ಏಷ್ಯನ್ ಮತ್ತು ಉಪ-ಸಹಾರನ್ ಉಗುಳುವ ನಾಗರಹಾವುಗಳು ಮತ್ತು ಆಸ್ಟ್ರೇಲಿಯಾದ ಕೆಂಪು-ಹೊಟ್ಟೆಯ ಕಪ್ಪು ಹಾವುಗಳು ಸೇರಿದಂತೆ ಹಾವಿನ ಆಯ್ದ ಪ್ರಭೇದಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಸತ್ತ ಅಥವಾ ಆಗಷ್ಟೇ ತಲೆಯನ್ನು ಕತ್ತರಿಸಿದ ಉಗುಳುವ ನಾಗರಹಾವುಗಳು ಮತ್ತು ಕ್ರೈಟ್‌ (ಕಟು ಹಾವು)ಗಳು ಕಚ್ಚುತ್ತವೆ ಹಾಗೂ ದೇಹದೊಳಗೆ ವಿಷವನ್ನು ಕಕ್ಕುತ್ತವೆ. ಸತ್ತ ಸ್ಥಿತಿಯಲ್ಲಿಯೂ ಇವುಗಳು ಮನುಷ್ಯರನ್ನು ಮತ್ತು ಇತರ ಪ್ರಾಣಿಗಳನ್ನು ಕೊಲ್ಲುತ್ತವೆ ಅಥವಾ ಅಂಗವಿಕಲಗೊಳಿಸುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಜರ್ನಲ್ ಫ್ರಾಂಟಿಯರ್ಸ್ ಇನ್ ಟ್ರಾಪಿಕಲ್ ಡಿಸೀಸ್‌ನ ಇತ್ತೀಚಿನ ಸಂಚಿಕೆಯಲ್ಲಿನ ಅಧ್ಯಯನವು ಭಾರತದಲ್ಲಿನ ನಾಗರಹಾವುಗಳು ಮತ್ತು ಕ್ರೈಟ್‌ಗಳು ಸತ್ತ ಮೂರು ಗಂಟೆಗಳ ನಂತರವೂ ಕಚ್ಚಿ ವಿಷವನ್ನು ದೇಹದೊಳಗೆ ಕಕ್ಕಬಹುದು ಎಂಬುದು ಕಂಡುಬಂದಿದೆ. ಭಾರತದ ಅಸ್ಸಾಂನ ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನವು ಫ್ರಾಂಟಿಯರ್ಸ್ ಇನ್ ಟ್ರಾಪಿಕಲ್ ಡಿಸೀಸ್ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಭಾರತೀಯ ನಾಗರಹಾವುಗಳು ಮತ್ತು ಕ್ರೈಟ್‌ಗಳು ಸತ್ತ ಹಲವಾರು ಗಂಟೆಗಳ ನಂತರವೂ ವಿಷವನ್ನು ಚುಚ್ಚಬಹುದು ಎಂದು ದೃಢಪಡಿಸಿದೆ.

ಅಸ್ಸಾಂನ ನಮ್ರಪ್ ಕಾಲೇಜಿನ ಸುಸ್ಮಿತಾ ಠಾಕೂರ್ ನೇತೃತ್ವದ ಸಂಶೋಧನಾ ತಂಡವು ಅಂತಹ ಮೂರು ಘಟನೆಗಳನ್ನು ದಾಖಲಿಸಿದೆ. ಮೊದಲ ಪ್ರಕರಣದಲ್ಲಿ, 45 ವರ್ಷದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಕೋಳಿಗಳ ಮೇಲೆ ಏಕವರ್ಣೀಯ ನಾಗರ ಹಾವು ಅಥವಾ ಉಗುಳುವ ನಾಗರಹಾವು ದಾಳಿ ಮಾಡುವುದನ್ನು ನೋಡಿ ಅದರ ತಲೆಯನ್ನು ಕತ್ತರಿಸಿ ಕೊಂದಿದ್ದ.
ಆದಾಗ್ಯೂ, ಆತ ನಾಗರಹಾವಿನ ದೇಹವನ್ನು ಎಸೆಯಲು ಪ್ರಯತ್ನಿಸುತ್ತಿರುವಾಗ, ಶಿರಚ್ಛೇದಿತ ಹಾವಿನ ತಲೆಯು ಆತನ ಬಲಗೈ ಹೆಬ್ಬೆರಳಿಗೆ ಕಚ್ಚಿತ್ತು. “ಕಚ್ಚಿದ ಸ್ಥಳದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು, ಅದು ಅವನ ಭುಜದವರೆಗೆ ಹರಡಿತು. ನಂತರ ಆತ ಹತ್ತಿರದ ಸಮುದಾಯ ಆಸ್ಪತ್ರೆಗೆ ಬಂದ ” ಎಂದು ಸಂಶೋಧಕರು ಬರೆದಿದ್ದಾರೆ. ಆಸ್ಪತ್ರೆಗೆ ಹೋಗುವ ಮಾರ್ಗದ ಮಧ್ಯೆ, 45 ವರ್ಷದ ವ್ಯಕ್ತಿ ಪದೇ ಪದೇ ವಾಂತಿ ಮಾಡಿಕೊಂಡ ಮತ್ತು “ಅಸಹನೀಯ ನೋವು” ಅನುಭವಿಸಿದ್ದ, ನಾಗರಹಾವು ಕಚ್ಚಿದ ಸ್ಥಳವು ಕಪ್ಪಾಗಲು ಪ್ರಾರಂಭಿಸಿತು ಎಂದು ಸಂಶೋಧಕರು ಗಮನಿಸಿದರು. ಹಾವಿನ ಛಾಯಾಚಿತ್ರವು ವೈದ್ಯರಿಗೆ ಮೊನೊಕ್ಲೆಡ್(ಏಕವರ್ಣೀಯ) ನಾಗರಹಾವಿನ ಕಡಿತ ಎಂದು ಗುರುತಿಸಲು ಸಹಾಯ ಮಾಡಿತು. ಆಸ್ಪತ್ರೆಯ ವೈದ್ಯರು ನೋವು ನಿವಾರಣೆಗಾಗಿ ಇಂಟ್ರಾವೆನಸ್ ಆಂಟಿವೆನಮ್ ಅನ್ನು ನೀಡಿದರು. “ಈ ಚಿಕಿತ್ಸೆಯ ನಂತರ ನೋವು ಗಮನಾರ್ಹವಾಗಿ ಕಡಿಮೆಯಾಯಿತು. ರೋಗಿಯಲ್ಲಿ ನರಗಳಲ್ಲಿ ವಿಷತ್ವದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ” ಎಂದು ಸಂಶೋಧಕರು ಗಮನಿಸಿದರು. 20 ದಿನಗಳ ನಂತರ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಯಿತು.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ಎರಡನೇ ಪ್ರಕರಣದಲ್ಲಿ, ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಿಳಿಯದೆ ತನ್ನ ಟ್ರ್ಯಾಕ್ಟರ್‌ನೊಂದಿಗೆ ಏಕವರ್ಣದ ನಾಗರಹಾವಿನ ಮೇಲೆ ಹತ್ತಿಸಿದ್ದ. ಹಾವು ಪೂರ್ತಿ ಅಪ್ಪಚ್ಚಿಯಾಗಿತ್ತು. ಆದರೆ ಕೆಲ ಗಂಟೆಗಳ ನಂತರ ತನ್ನ ಕೆಲಸ ಮುಗಿದ ನಂತರ ಟ್ರ್ಯಾಕ್ಟರ್‌ನಿಂದ ಇಳಿದಾಗ ಸತ್ತಿದೆ ಎಂದು ಭಾವಿಸಲಾದ ಹಾವು ವ್ಯಕ್ತಿಯ ಕಾಲಿಗೆ ಕಚ್ಚಿತ್ತು.
“ಹಾವು ಕಚ್ಚಿದ ಸ್ಥಳದಲ್ಲಿ ತೀವ್ರ ನೋವು, ಊತ ಮತ್ತು ಗಮನಾರ್ಹ ಬಣ್ಣ ಬದಲಾವಣೆಯ ಆಗಿದ್ದರ ಬಗ್ಗೆ ರೋಗಿಯು ವೈದ್ಯರಿಗೆ ತಿಳಿಸಿದ್ದಾನೆ” ಎಂದು ವಿಜ್ಞಾನಿಗಳು ಬರೆದಿದ್ದಾರೆ. ಆತ ಆಸ್ಪತ್ರೆಯಲ್ಲಿ ಎರಡು ಬಾರಿ ವಾಂತಿಯಾಗಿದೆ ಎಂದು ಹೇಳಿದ್ದಾನೆ. ರೋಗಿಯು ನರಗಳು ವಿಷತ್ವದ ಯಾವುದೇ ಲಕ್ಷಣಗಳನ್ನು ತೋರಿಸದಿದ್ದರೂ, ಕಚ್ಚುವಿಕೆಯು ಹುಣ್ಣಿಗೆ ಕಾರಣವಾಯಿತು ಎಂದು ಸಂಶೋಧಕರು ಗಮನಿಸಿದ್ದಾರೆ.
“ಟ್ರ್ಯಾಕ್ಟರ್‌ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿ ಸತ್ತಿದೆ ಎಂದು ಭಾವಿಸಲಾಗಿದ್ದರೂ, ಘಟನೆಯ ಹಲವಾರು ಗಂಟೆಗಳ ಕಾಲ ನಾಗರ ಹಾವು ವಿಷತ್ವದ ಕಚ್ಚುವಿಕೆಯ ಸಾಮರ್ಥ್ಯವನ್ನು ಹೊಂದಿತ್ತು, ವಿಸ್ತೃತ ಗಾಯದ ಆರೈಕೆಯೊಂದಿಗೆ ವಿಷ-ವಿರೋಧಿ ಚಿಕಿತ್ಸೆ ಅಗತ್ಯವಾಗಿತ್ತು” ಎಂದು ಅವರು ಬರೆದಿದ್ದಾರೆ.

ಮೂರನೇ ಘಟನೆಯಲ್ಲಿ, ಕಪ್ಪು ಹಾವು ಮನೆಗೆ ಪ್ರವೇಶಿಸಿದಾಗ ಅದನ್ನು ಕೊಂದು ಅದರ ದೇಹವನ್ನು ಹಿತ್ತಲಿನಲ್ಲಿ ಎಸೆಯಲಾಯಿತು. ನಂತರ ಹಾವನ್ನು ನೋಡಲು ಬಂದ ನೆರೆಯಾತ ಸತ್ತ ಹಾವಿನ ತಲೆ ಹಿಡಿದು ಎತ್ತಿದ. ಅದು ಆತನ ಬಲಗೈಯ ಕಿರುಬೆರಳಿಗೆ ಕಚ್ಚಿತು. ಗಂಟೆಗಳ ನಂತರ ಆತನಿಗೆ ನುಂಗಲು ತೊಂದರೆ ಆರಂಭವಾಯಿತು ಮತ್ತು ಕಣ್ಣುರೆಪ್ಪೆಗಳು ಜೋತುಬಿದ್ದವು. ವೈದ್ಯರು ರೋಗಿ ಜೊತೆ ಆಸ್ಪತ್ರೆಗೆ ತಂದ ಸತ್ತ ಹಾವನ್ನು ಕಪ್ಪು ಕ್ರೈಟ್ (ಕಟು ಹಾವು) ಎಂದು ಗುರುತಿಸಿದರು. “3 ಗಂಟೆಗಳ ಹಿಂದೆ ಸತ್ತಿದ್ದ ಹಾವು ಆತನಿಗೆ ಕಚ್ಚಿ ವಿಷವನ್ನು ಶರೀರದೊಳಗೆ ಕಕ್ಕಿತ್ತು” ಎಂದು ವಿಜ್ಞಾನಿಗಳು ಬರೆದಿದ್ದಾರೆ.
ಪಾಲಿವೇಲೆಂಟ್ ಆಂಟಿವೆನಮ್‌ನ 20 ಬಾಟಲಿಗಳನ್ನು ನೀಡಿದ್ದರೂ, ರೋಗಿಯು ಪ್ರತಿಕ್ರಿಯಿಸಿರಲಿಲ್ಲ ಮತ್ತು ಆತನ ಸ್ಥಿತಿ ಹದಗೆಟ್ಟಿತು. ಆತ ಕ್ರಮೇಣ ಮೌಖಿಕ ಆಜ್ಞೆಗಳಿಗೆ ಪ್ರತಿಕ್ರಿಯಿಸಲಿಲ್ಲ” ಎಂದು ಸಂಶೋಧಕರು ಬರೆದಿದ್ದಾರೆ. 43 ಗಂಟೆಗಳ ಕಾಲ ಕೃತಕ ಉಸಿರಾಟದ ಬೆಂಬಲ ನೀಡಿದ ನಂತರ ರೋಗಿಯ ಸ್ಥಿತಿ ಸುಧಾರಿಸಿತು ಮತ್ತು ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಇರಬೇಕಾಯಿತು. “ಆರೋಗ್ಯ ಉತ್ತಮಗೊಂಡ ನಂತರ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಯಿತು ಎಂದು ವಿಜ್ಞಾನಿಗಳು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಬೆಚ್ಚಗಿನ ರಕ್ತದ ಸಸ್ತನಿಗಳ ಮೆದುಳು ಅವುಗಳನ್ನು ಕೊಂದ ಅಥವಾ ತಲೆ ತುಂಡರಿಸಿದ ನಂತರ 6-7 ನಿಮಿಷಗಳಲ್ಲಿ ನಿಷ್ಕ್ರಿಯವಾಗುತ್ತವೆ. ಆದರೆ ಶೀತ-ರಕ್ತದ ಹಾವುಗಳ ನಿಧಾನ ಚಯಾಪಚಯ ಕ್ರಿಯೆಯು ತಲೆ ತುಂಡರಿಸಿದ ಅಥವಾ ಸಾವಿನ ನಂತರ 4ರಿಂದ 6ಗಂಟೆಗಳ ಕಾಲ ಅವುಗಳ ಮೆದುಳು ಸಕ್ರಿಯವಾಗಿರಲು ಕಾರಣವಾಗುತ್ತದೆ. ಯಾರಾದರೂ ಅವುಗಳ ತಲೆ ಅಥವಾ ಕುತ್ತಿಗೆಯನ್ನು ಮುಟ್ಟಿದರೆ ಅವು ಕಚ್ಚುತ್ತವೆ” ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಪ್ರಕರಣಗಳ ಆಧಾರದ ಮೇಲೆ, ತೀವ್ರ ಗಾಯಗಳಾಗಿದ್ದರೂ ಅಥವಾ ಸತ್ತರೂ ಕೆಲವು ಹಾವುಗಳು ನಮಗೆ ಕಚ್ಚಿ ವಿಷವನ್ನು ನಮ್ಮ ದೇಹದೊಳಕ್ಕೆ ಕಕ್ಕಬಹುದು, ಇದು ತೀವ್ರ ತೊಡಕುಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಮುಂಭಾಗದ ಕೋರೆಹಲ್ಲು ಹೊಂದಿರುವ ಹಾವುಗಳಲ್ಲಿ ವಿಷದ ಉಪಕರಣದ ವಿಶಿಷ್ಟ ರಚನಾತ್ಮಕ ಸಂಘಟನೆಯಿಂದಾಗಿ ಈ ಸಾಮರ್ಥ್ಯವು ಮುಂದುವರಿಯುತ್ತದೆ ಎಂದು ಅವರು ಗಮನಿಸಿದರು. “ಇವು ವಿಷ ಗ್ರಂಥಿಯು ಸ್ರವಿಸುವ ವಿಷವನ್ನು ಸಂಗ್ರಹಿಸಲು ದೊಡ್ಡ ತಳದ ಲುಮೆನ್ ಅನ್ನು ಹೊಂದಿರುತ್ತದೆ, ಇದು ಉದ್ದವಾದ ಟೊಳ್ಳಾದ ಕೋರೆಹಲ್ಲಿಗೆ ಸಂಪರ್ಕ ಹೊಂದಿದೆ” ಎಂದು ಸಂಶೋಧಕರು ಬರೆದಿದ್ದಾರೆ.
ಸತ್ತ ಹಾವಿನ ವಿಷ ಗ್ರಂಥಿಯು ಅದರ ಕತ್ತರಿಸಿದ ತಲೆಯನ್ನು ಮುಟ್ಟುವಾಗ ಆಕಸ್ಮಿಕವಾಗಿ ಒತ್ತಿದರೆ ವಿಷಪೂರಿತತೆ ಸಂಭವಿಸಬಹುದು. “ಇಲ್ಲಿ ಹೈಲೈಟ್ ಮಾಡಲಾದ ಪ್ರಕರಣಗಳಲ್ಲಿ, ಅಂತಹ ವಿಷಪೂರಿತತೆಗಳು ಜೀವಂತ ಹಾವುಗಳಿಂದ ಉತ್ಪತ್ತಿಯಾಗುವ ವೈದ್ಯಕೀಯ ಲಕ್ಷಣಗಳಿಗೆ ಹೋಲುವ ಲಕ್ಷಣಗಳಿಗೆ ಕಾರಣವಾಗುತ್ತವೆ” ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement