ಇಸ್ಲಾಮಾಬಾದ್: ಈ ವರ್ಷದ ಮೇ ತಿಂಗಳಲ್ಲಿ ಭಾರತದೊಂದಿಗೆ ನಡೆದ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ “ದೈವಿಕ ಮಧ್ಯಪ್ರವೇಶ” (Divine Intervention) ನಮಗೆ ಸಹಾಯ ಮಾಡಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರ ಭಾಷಣದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಆರಂಭಿಸಿದ ನಂತರ ಉಂಟಾದ ನಾಲ್ಕು ದಿನಗಳ ಸುದೀರ್ಘ ಸೇನಾ ಸಂಘರ್ಷದ ಕುರಿತು ಮಾತನಾಡಿದ ಮುನೀರ್, “ಆ ಸಮಯದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ದೈವಿಕ ಶಕ್ತಿಯ ಅನುಭವವನ್ನು ಪಡೆದವು. ಅದನ್ನು ನಾವು ಪ್ರತ್ಯಕ್ಷವಾಗಿ ಅನುಭವಿಸಿದ್ದೇವೆ,” ಎಂದು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವಂತೆ ಮಾತನಾಡಿದ್ದಾರೆ.
ಭಾನುವಾರ ಸ್ಥಳೀಯ ದೂರದರ್ಶನದಲ್ಲಿ ಪ್ರಸಾರವಾದ ಅವರ ಭಾಷಣದ ತುಣುಕುಗಳ ಪ್ರಕಾರ “ನಾವು ಅದನ್ನು (ದೈವಿಕ ಸಹಾಯ) ಅನುಭವಿಸಿದ್ದೇವೆ” ಎಂದು ಮುನೀರ್ ಹೇಳಿದ್ದಾರೆ. ಡಿಸೆಂಬರ್ 10 ರಂದು ನಡೆದ ಈ ಸಭೆಯಲ್ಲಿ ಅವರು ಭಾರತದ ವಿರುದ್ಧದ ಸಂಘರ್ಷವನ್ನು ಉಲ್ಲೇಖಿಸಲು ಧಾರ್ಮಿಕ ರೂಪಕಗಳನ್ನು ಬಳಸಿದ್ದಾರೆ.
ಮೇ 10 ರಂದು ಎರಡೂ ಕಡೆಯವರು ಯುದ್ಧವನ್ನು ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ತಲುಪುವ ಮೊದಲು ಭಾರತದ ಆಪರೇಷನ್ ಸಿಂಧೂರ ಎರಡು ದೇಶಗಳ ನಡುವೆ ನಡುವೆ ನಾಲ್ಕು ದಿನಗಳ ತೀಕ್ಷ್ಣವಾದ ಮಿಲಿಟರಿ ಸಂಘರ್ಷಕ್ಕೆ ಕಾರಣವಾಯಿತು.
ಇದೇ ಸಂದರ್ಭದಲ್ಲಿ ಅಫ್ಘಾನ್ ತಾಲಿಬಾನ್ ವಿರುದ್ಧವೂ ಹರಿಹಾಯ್ದ ಮುನೀರ್, “ಪಾಕಿಸ್ತಾನ ಮತ್ತು ಭಯೋತ್ಪಾದಕ ಸಂಘಟನೆ ಟಿಟಿಪಿ (TTP) ನಡುವೆ ಅಫ್ಘಾನಿಸ್ತಾನ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಪಾಕಿಸ್ತಾನದೊಳಗೆ ನುಸುಳುತ್ತಿರುವ ಉಗ್ರರಲ್ಲಿ ಶೇ. 70 ರಷ್ಟು ಮಂದಿ ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ. ಅಫ್ಘಾನಿಸ್ತಾನವು ನಮ್ಮ ಪಾಕಿಸ್ತಾನಿ ಮಕ್ಕಳ ರಕ್ತವನ್ನು ಚೆಲ್ಲುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇಸ್ಲಾಮಿಕ್ ರಾಷ್ಟ್ರದಲ್ಲಿ ಸರ್ಕಾರದ ಅನುಮತಿಯಿಲ್ಲದೆ ಯಾರೂ ‘ಜಿಹಾದ್’ ಘೋಷಿಸುವಂತಿಲ್ಲ ಎಂದು ಮುನೀರ್ ಇದೇ ವೇಳೆ ಹೇಳಿದರು. “ಅಧಿಕಾರದಲ್ಲಿರುವವರ ಆದೇಶ ಮತ್ತು ಅನುಮತಿಯಿಲ್ಲದೆ ಯಾರೂ ಜಿಹಾದ್ಗಾಗಿ ಫತ್ವಾ ಹೊರಡಿಸಲು ಸಾಧ್ಯವಿಲ್ಲ,” ಎಂದು ಅವರು ಗುಡುಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ