
ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಸೋಮವಾರ ನಡೆದ ಒಂದು ವಿವಾಹ ಸಮಾರಂಭವು ಕ್ಷಣಾರ್ಧದಲ್ಲಿ ಹಿಂಸಾತ್ಮಕ ಸ್ಥಳವಾಗಿ ಮಾರ್ಪಟ್ಟಿತು. ವೇದಿಕೆಯ ಮೇಲೆ ನಿಂತಿದ್ದ ವರನಿಗೆ ಚಾಕುವಿನಿಂದ ಇರಿಯಲಾಗಿದ್ದು, ಈ ಇಡೀ ದಾಳಿಯ ದೃಶ್ಯವನ್ನು ವೀಡಿಯೊ ಚಿತ್ರೀಕರಣಕ್ಕಾಗಿ ಬಳಸಲಾಗಿದ್ದ ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿದೆ. ಅಷ್ಟೇ ಅಲ್ಲದೆ, ಡ್ರೋನ್ ಅಪರಾಧಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಹಿಂಬಾಲಿಸಿ ಅವರ ಪರಾರಿಯಾಗುವ ದೃಶ್ಯವನ್ನೂ ಸೆರೆ ಹಿಡಿದಿದೆ.
ಅಮರಾವತಿಯ ಬಡ್ನೇರಾ ರಸ್ತೆಯಲ್ಲಿರುವ ಸಾಹಿಲ್ ಲಾನ್ನಲ್ಲಿ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದೆ. 22 ವರ್ಷದ ಸುಜಲ್ ರಾಮಸಮುದ್ರ ಎಂಬ ವರನ ವಿವಾಹ ಸಮಾರಂಭ ನಡೆಯುತ್ತಿದ್ದಾಗ, ಆರೋಪಿ ರಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯ ಬಳಿ ಬಂದು ಚಾಕುವಿನಿಂದ ವರನಿಗೆ ಮೂರು ಬಾರಿ ಇರಿದಿದ್ದಾನೆ. ಈ ದಾಳಿಯಿಂದ ವರನ ತೊಡೆ ಮತ್ತು ಮೊಣಕಾಲಿಗೆ ಗಾಯಗಳಾಗಿವೆ.

ಡ್ರೋನ್ನಿಂದ ಮಹತ್ವದ ಸಾಕ್ಷ್ಯ ಸಂಗ್ರಹ
ಸಂತೋಷದ ಕ್ಷಣಗಳನ್ನು ದಾಖಲಿಸಲು ಬಳಸಿದ್ದ ಡ್ರೋನ್ ಕ್ಯಾಮೆರಾ ಇದೀಗ ಈ ಹಿಂಸಾತ್ಮಕ ಅಪರಾಧದಲ್ಲಿ ನಿರ್ಣಾಯಕ ಸಾಕ್ಷಿಯಾಗಿದೆ. ಅತಿಥಿಗಳಲ್ಲಿ ಆತಂಕ ಸೃಷ್ಟಿಯಾದಾಗಲೂ, ಡ್ರೋನ್ ಆಪರೇಟರ್ ಚಿತ್ರೀಕರಣವನ್ನು ಮುಂದುವರೆಸಿ, ಪರಾರಿಯಾಗುತ್ತಿದ್ದ ಆಕ್ರಮಣಕಾರನನ್ನು ಹಿಂಬಾಲಿಸಿದ್ದಾರೆ. ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಡ್ರೋನ್ ಆರೋಪಿಗಳ ಚಲನವಲನಗಳನ್ನು ದಾಖಲಿಸಿದೆ. ನಂತರ, ಅದರ ದೃಷ್ಟಿಯಿಂದ ಆರೋಪಿಗಳು ಮರೆಯಾಗಿದ್ದಾನೆ.
ಪೊಲೀಸರು ಈ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ ಆರೋಪಿಯ ಮುಖ ಮತ್ತು ಆತ ಪರಾರಿಯಾದ ಮಾರ್ಗ ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರಿಗಳು ಇದನ್ನು ಪ್ರಕರಣದ ಪ್ರಮುಖ ಸಾಕ್ಷ್ಯ ಎಂದು ಕರೆದಿದ್ದಾರೆ.
ಪರಾರಿಯ ದೃಶ್ಯ ಸೆರೆ
ಆರೋಪಿಯು ಲಾನ್ನಿಂದ ಹೊರಗೆ ಓಡಿ ಹೋಗಿ ಅಲ್ಲಿ ನಿಲ್ಲಿಸಿದ್ದ ಬೈಕ್ ಏರಿ ಪರಾರಿಯಾಗುವುದು ವೀಡಿಯೊದಲ್ಲಿ ದಾಖಲಾಗಿದೆ. ಕಪ್ಪು ಬಣ್ಣದ ಉಡುಪಿನಲ್ಲಿದ್ದ ಇನ್ನೊಬ್ಬ ವ್ಯಕ್ತಿಯೂ ಬೈಕ್ ಏರಿ ಅವನೊಂದಿಗೆ ಪರಾರಿಯಾಗಿದ್ದಾನೆ. ದಂಪತಿಯ ಸಂಬಂಧಿಕರೊಬ್ಬರು ಅವರನ್ನು ಹಿಡಿಯಲು ಪ್ರಯತ್ನಿಸಿದ್ದು ಸಹ ವಿಡಿಯೋದಲ್ಲಿದೆ.
“ಡ್ರೋನ್ ಆಪರೇಟರ್ನ ಈ ಸಮಯಪ್ರಜ್ಞೆ ನಮಗೆ ಬಹಳ ಸಹಕಾರಿಯಾಗಿದೆ. ಆರೋಪಿಯನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಈ ವೀಡಿಯೊ ಗಣನೀಯವಾಗಿ ಸಹಾಯ ಮಾಡುತ್ತದೆ” ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ಸುನಿಲ್ ಚೌಹಾಣ ತಿಳಿಸಿದ್ದಾರೆ.
ಡಿಜೆ ಪ್ರದರ್ಶನದ ಕಲಹವೇ ದಾಳಿಗೆ ಕಾರಣ?
ಪ್ರಾಥಮಿಕ ತನಿಖೆಯ ಪ್ರಕಾರ, ಡಿಜೆ ಪ್ರದರ್ಶನದ ವೇಳೆ ವರ ಮತ್ತು ಆರೋಪಿಯ ನಡುವೆ ನಡೆದ ಒಂದು ಸಣ್ಣ ವಾಗ್ವಾದವೇ ಈ ದಾಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ನೃತ್ಯ ಮಾಡುವಾಗ ಇಬ್ಬರ ಮಧ್ಯೆ ತಳ್ಳಾಟ ನಡೆದಿತ್ತು. ಇದರ ನಂತರ ನಡೆದ ವಾಗ್ವಾದದಿಂದ ಬಕ್ಷಿ ಕೋಪಗೊಂಡು ಈ ದಾಳಿ ನಡೆಸಿರುವುದು ಕಂಡುಬಂದಿದೆ. ಇದಲ್ಲದೆ, ಇರಿತದ ನಂತರ ಉಂಟಾದ ಗೊಂದಲದಲ್ಲಿ, ಆರೋಪಿಯು ವರನ ತಂದೆ ರಾಮಜಿ ಸಮುದ್ರ ಅವರ ಮೇಲೂ ದಾಳಿ ಮಾಡಲು ಪ್ರಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ತನಿಖೆ ಚುರುಕು
ಬಡ್ನೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸ್ ತಂಡಗಳು ಡ್ರೋನ್ ದೃಶ್ಯಾವಳಿಯನ್ನು ಬಳಸಿಕೊಂಡು ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತವಾಗಿವೆ ಮತ್ತು ಆತನ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ. “ಆರೋಪಿ ತಲೆಮರೆಸಿಕೊಂಡಿದ್ದಾನೆ, ಆದರೆ ನಮ್ಮಲ್ಲಿರುವ ದೃಶ್ಯ ಸಾಕ್ಷ್ಯದೊಂದಿಗೆ, ಆತನ ಬಂಧನ ಆಗಲಿದೆ ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಯಗೊಂಡ ವರನನ್ನು ತಕ್ಷಣವೇ ಅಮರಾವತಿಯ RIMS ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಳವಾದ ಗಾಯಗಳಾಗಿದ್ದರೂ ಅವರು ಈಗ ಸ್ಥಿರವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ