
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಾರಿ ಅಮೆರಿಕ ನೆಲದಿಂದ ಬಾರತಕ್ಕೆ ಬೆದರಿಕೆ ಹಾಕಿದ್ದಾರೆ. ಭವಿಷ್ಯದಲ್ಲಿ ಭಾರತದ ಜೊತೆ ಯುದ್ಧ ನಡೆದು ಪಾಕಿಸ್ತಾನಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ಆಗ ಪಾಕಿಸ್ತಾನವು ಈ ಪ್ರದೇಶವನ್ನು ಪರಮಾಣು ಯುದ್ಧದಲ್ಲಿ ಮುಳುಗಿಸುತ್ತದೆ ಮತ್ತು “ಜಗತ್ತಿನ ಅರ್ಧದಷ್ಟನ್ನು” ನಾಶಪಡಿಸುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
“ನಾವು ಪರಮಾಣು ರಾಷ್ಟ್ರ; ನಾವು ಕುಸಿಯುತ್ತಿದ್ದೇವೆ ಎಂದು ನಾವು ಭಾವಿಸಿದರೆ, ನಮ್ಮೊಂದಿಗೆ ಅರ್ಧದಷ್ಟು ಜಗತ್ತನ್ನು ನಾಶಪಡಿಸುತ್ತೇವೆ” ಎಂದು ಮುನೀರ್ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ಲೋರಿಡಾದ ಟ್ಯಾಂಪಾದಲ್ಲಿ ಆಯೋಜಿಸಿದ್ದ ಕಪ್ಪು-ಟೈ ಕಾರ್ಯಕ್ರಮದಲ್ಲಿ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ವರದಿಯ ಪ್ರಕಾರ, ತೃತೀಯ ದೇಶದ ವಿರುದ್ಧ ಅಮೆರಿಕದ ನೆಲದಿಂದ ಪರಮಾಣು ದಾಳಿಯ ಬೆದರಿಕೆಗಳು ಬಂದಿರುವುದು ಇದೇ ಮೊದಲು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನೆರಳಿನಿಂದ ಹೊರಬಂದ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ “ತಡೆಹಿಡಿದ” ಸಿಂಧೂ ಜಲ ಒಪ್ಪಂದದ ವಿಷಯದ ಬಗ್ಗೆಯೂ ಮಾತನಾಡಿದ್ದಾರೆ. ಭಾರತದ ನಿರ್ಧಾರವು 25 ಕೋಟಿ ಜನರನ್ನು ಹಸಿವಿನಿಂದ ಬಳಲುವ ಅಪಾಯಕ್ಕೆ ಸಿಲುಕಿಸಬಹುದು ಎಂದು ಹೇಳಿದ್ದಾರೆ.
ನದಿಯ ಮೇಲ್ಭಾಗದಲ್ಲಿ ನಿರ್ಮಿಸಲಿರುವ ಭಾರತದ ಅಣೆಕಟ್ಟುಗಳನ್ನು ಕ್ಷಿಪಣಿಗಳಿಂದ ನಾಶಪಡಿಸುವುದಾಗಿ ಬೆದರಿಕೆ ಹಾಕಿದ ಮುನೀರ್ ಪಾಕಿಸ್ತಾನದ ಬಳಿ ಸಾಕಷ್ಟು ಕ್ಷಿಪಣಿಗಳಿವೆ ಎಂದು ಎಚ್ಚರಿಸಿದ್ದಾರೆ. “ಭಾರತವು ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ, ಮತ್ತು ಅದು ಹಾಗೆ ಮಾಡಿದಾಗ, ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ನಮಗೆ ಕ್ಷಿಪಣಿಗಳ ಕೊರತೆಯಿಲ್ಲ ಎಂದು ಮುನೀರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರು ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅಮೆರಿಕದ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಭೇಟಿ ಮಾಡಲು ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಮುನೀರ್ ಅಮೆರಿಕ ಸೇನೆಯ ಜಂಟಿ ಮುಖ್ಯಸ್ಥ ಜನರಲ್ ಜಾನ್ ಡಾನ್ ಕೈನ್ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಲು ಅವರನ್ನು ಆಹ್ವಾನಿಸಿದರು ಎಂದು ಪಾಕಿಸ್ತಾನದ ಮಿಲಿಟರಿ ವಿಭಾಗದ ಹೇಳಿಕೆ ತಿಳಿಸಿದೆ. ಅವರು “ಪರಸ್ಪರ ವೃತ್ತಿಪರ ಹಿತಾಸಕ್ತಿಯ” ವಿಷಯಗಳನ್ನು ಚರ್ಚಿಸಿದರು ಎಂದು ಅದು ಹೇಳಿದೆ.
ಇದಕ್ಕೂ ಮೊದಲು, ಅವರು ಮೊದಲ ಸಲ ಅಮೆರಿಕಕ್ಕೆ ಭೇಟಿ ನೀಡಿದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಖಾಸಗಿ ಔತಣಕೂಟಕ್ಕೆ ಆತಿಥ್ಯ ವಹಿಸಿದ್ದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಪ್ರದೇಶದಲ್ಲಿ ಇತ್ತೀಚೆಗೆ ಉಂಟಾದ ಉದ್ವಿಗ್ನತೆಗೆ ಮುನೀರ್ ಹಲವಾರು ಸಂದರ್ಭಗಳಲ್ಲಿ ಯಾವುದೇ ಪುರಾವೆಗಳಿಲ್ಲದೆ ಭಾರತವನ್ನು ದೂಷಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಕುಸಿದವು. ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಇಸ್ಲಾಮಾಬಾದ್ ರಾಜತಾಂತ್ರಿಕ ಮಿಷನ್ ಬಲವನ್ನು ಕಡಿತಗೊಳಿಸುವುದು ಸೇರಿದಂತೆ ಹಲವಾರು ದಂಡನಾತ್ಮಕ ಕ್ರಮಗಳನ್ನು ಪ್ರಕಟಿಸಿತು.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಮೇಲೆ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ಸೇನಾ ಸಂಘರ್ಷ ನಡೆಯಿತು. ಭಾರತವು ಪಾಕಿಸ್ತಾನದ ಹಲವಾರು ವಾಯುನೆಲೆಗಳನ್ನು ನಾಶಪಡಿಸಿತು. ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ಗಳನ್ನು ನಾಶಪಡಿಸಿತು.


ನಿಮ್ಮ ಕಾಮೆಂಟ್ ಬರೆಯಿರಿ